ಮಲ್ಲಿಕಾ ಸಾರಾಭಾಯ್ (ಜನನ ೯ ಮೇ ೧೯೫೩) ಭಾರತದ ಗುಜರಾತ್ ರಾಜ್ಯದ ಹೆಸರಾಂತ ಕಾರ್ಯಕರ್ತೆ ಹಾಗು ನೃತ್ಯಗಾರ್ತಿ. ಶಾಸ್ತ್ರೀಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಹಾಗು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಪುತ್ರಿಯಾದ ಮಲ್ಲಿಕಾ ಒಬ್ಬ ಪರಿಪೂರ್ಣ ಮಟ್ಟದ ಕೂಚಿಪುಡಿ ಹಾಗು ಭರತನಾಟ್ಯಂ ಶೈಲಿಯ ನೃತ್ಯಗಾರ್ತಿ. ಇವರು ರಂಗಭೂಮಿ, ಕಿರುತೆರೆ, ಚಲನಚಿತ್ರ, ಬರವಣಿಗೆ ಹಾಗು ಮುದ್ರಣ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಂದಾಗಿ ಪರಿಚಿತರಾಗಿದ್ದಾರೆ. ಇವರೊಬ್ಬ TEDನ (ಟೆಕ್ನಾಲಾಜಿ,ಎಂಟರ್ಟೇನ್ಮೆಂಟ್ ಡೆಸೈನ್) ಫೆಲೋ(ವಿದ್ವನ್ಮಂಡಳಿ ಸದಸ್ಯೆ) ಸಹ ಆಗಿದ್ದಾರೆ. == ಆರಂಭಿಕ ಜೀವನ == ಭಾರತದ ಗುಜರಾತ್ ನಲ್ಲಿ, ವಿಕ್ರಂ ಸಾರಾಭಾಯ್ ಹಾಗು ಮೃಣಾಲಿನಿ ಸಾರಾಭಾಯ್ ದಂಪತಿಗಳಿಗೆ ಇವರು ೧೯೫೩ರಲ್ಲಿ ಜನಿಸಿದರು. ಇವರು ಗುಜರಾತ್ ರಾಜ್ಯದ ತಮ್ಮ ಸ್ವಂತ ಊರಾದ ಅಹಮದಾಬಾದಿನ ಸೈಂಟ್ ಜೇವಿಯರ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರು ಪ್ರತಿಷ್ಠಿತ ಅಹಮದಾಬಾದಿನಿಂದ (೧೯೭೪) ಪದವಿ ಪಡೆದಿದ್ದಾರೆ. ಜೊತೆಗೆ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು(ಸಾಂಸ್ಥಿಕ ವ್ಯವಹಾರ ವಿಷಯ) ಪಡೆದಿದ್ದಾರೆ(೧೯೭೬). ಜೊತೆಗೆ ನಟನೆ, ಚಿತ್ರ-ನಿರ್ಮಾಣ, ಸಂಕಲನ ಹಾಗು ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಅನುಭವ ಹೊಂದಿದ್ದಾರೆ. == ವೃತ್ತಿಜೀವನ == ಇವರು ಬಾಲ್ಯದಿಂದಲೇ ನೃತ್ಯಾಭ್ಯಾಸ ಆರಂಭಿಸಿದರು, ಹಾಗು ತಮ್ಮ ೧೫ನೇ ವಯಸ್ಸಿನಿಂದಲೇ ಕಲಾತ್ಮಕ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರಬದುಕನ್ನು ಆರಂಭಿಸಿದರು. ಪೀಟರ್ ಬ್ರೂಕ್ ರ ನಾಟಕ ದಿ ಮಹಾಭಾರತ ದಲ್ಲಿ ದ್ರೌಪದಿಯ ಪಾತ್ರ ನಿರ್ವಹಿಸಿದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಮಲ್ಲಿಕಾ ಹಲವು ಪ್ರಶಸ್ತಿಗಳಿಗೆ ಭಾಜನರಾದರು. ದಿ-ಗೋಲ್ಡನ್ ಸ್ಟಾರ್ ಪ್ರಶಸ್ತಿಯೂ ಇದರಲ್ಲಿ ಒಂದು, ಇದನ್ನು ೧೯೭೭ರಲ್ಲಿ ಥಿಯೇಟರ್ ಡೆ ಚಾಂಪ್ಸ್ ಎಲಿಸೀಸ್ ನಿಂದ ಏಕೈಕ, ಅತ್ಯುತ್ತಮ ನೃತ್ಯಗಾರ್ತಿ ಎಂಬ ಪ್ರಶಸ್ತಿ ಪಡೆದರು. ನೃತ್ಯಗಾರ್ತಿಯಾಗಿರುವುದರ ಜೊತೆಗೆ, ಸಾರಾಭಾಯ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಇವರು, ತಮ್ಮ ತಾಯಿಯ ಜೊತೆಗೂಡಿ, ಅಹಮದಾಬಾದಿನಲ್ಲಿರುವ ದರ್ಪಣಾ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ್ನು ನಡೆಸುತ್ತಾರೆ. ಗುಜರಾತಿನಲ್ಲಿನ ೨೦೦೨ರ ಹಿಂಸಾಚಾರದ ವಿರುದ್ಧ ಸಾರ್ವಜನಿಕವಾಗಿ ತಾವು ಮಾಡಿದ ಟೀಕೆಗೆ ಗುಜರಾತಿನ ನರೇಂದ್ರ ಮೋದಿ ಸರ್ಕಾರವು ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆಪಾದಿಸುವ ಮೂಲಕ ಪ್ರಚಾರ ಗಿಟ್ಟಿಸಿದರು; ಆದರೆ ೨೦೦೨ರ ಉತ್ತರಾರ್ಧದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವು, ಇವರು ಲೈಂಗಿಕ ಶೋಷಣೆಗಾಗಿ, ಅಕ್ರಮವಾಗಿ ಮಾನವ ಸಾಗಣೆಯನ್ನು ಮಾಡುತ್ತಿದಾರೆಂದು ಇವರ ಬಗ್ಗೆ ಆರೋಪ ಮಾಡಿತ್ತು. ಗುಜರಾತಿನ ಸರ್ಕಾರವು ಡಿಸೆಂಬರ್ ೨೦೦೪ರಲ್ಲಿ ಈ ಕುರಿತಾದ ಮೊಕದ್ದಮೆಯನ್ನು ಕೈಬಿಟ್ಟಿತು. == ಜಾಗೃತಿಗಾಗಿ ರಂಗಭೂಮಿ == ೧೯೮೯ರಲ್ಲಿ ಇವರು ಬಹಳ ತೀಕ್ಷ್ಣವೆನಿಸಿದ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದರು, ಶಕ್ತಿ: ದಿ ಪವರ್ ಆಫ್ ವುಮೆನ್ , ಈ ಕಲಾ ಪ್ರದರ್ಶನದ ಮೂಲೋದ್ದೇಶವಾಗಿತ್ತು. ಇದರ ನಂತರ, ಪ್ರಸಕ್ತದ ವಿಷಯಗಳನ್ನು ಆಧರಿಸಿದ ಅಸಂಖ್ಯಾತ ಕಲಾ ಪ್ರದರ್ಶನ ನಿರ್ಮಾಣಗಳನ್ನು ನಿರ್ದೇಶಿಸಿ ಅದರಲ್ಲಿ ನಟಿಸಿದ್ದಾರೆ, ಜೊತೆಯಲ್ಲೇ ಇವು ಸಾಮಾಜಿಕ ಬದಲಾವಣೆಗೆ ಜಾಗೃತಿ ಮೂಡಿಸಿದವು. ಮಲ್ಲಿಕಾ ಸಾರಾಭಾಯ್, ಹರ್ಷ್ ಮಂದರ್ ರ ಕೃತಿ ಅನ್ಹರ್ಡ್ ವಾಯ್ಸಸ್ ನ್ನು ಆಧರಿಸಿದ ಅನ್ಸುನಿ ಎಂಬ ನಾಟಕಕ್ಕೆ ಚಿತ್ರಕಥೆ ಸಹ ಬರೆದಿದ್ದಾರೆ. ಅರವಿಂದ್ ಗೌರ್ ಇದನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿದ್ದು, ಮಲ್ಲಿಕಾ ಸಾರಾಭಾಯ್ ದರ್ಪಣಾ ಅಕ್ಯಾಡೆಮಿಗಾಗಿ ಅನ್ಸುನಿಯನ್ನು ನಿರ್ದೇಶಿಸಿದ್ದಾರೆ.ಅನ್ಸುನಿ ಭಾರತದ ಎಲ್ಲೆಡೆಯೂ ಪ್ರದರ್ಶನ ಕಂಡಿದೆ. ಅಹಮದಾಬಾದಿನ ಕಲಾಸಂಸ್ಥೆಯಾದ ದರ್ಪಣಾ, ಅನ್ಸುನಿಯ ನಿರ್ಮಾಣದ ಮೂಲಕ ಜಾಗೃತಿಯ ಜನಾಂದೋಲನ ಹುಟ್ಟುಹಾಕಿದೆ. ನವೆಂಬರ್ ೨೦೦೯ರಲ್ಲಿ, ಅರವಿಂದ್ ಗೌರ್ ರ ಜೊತೆಯಲ್ಲಿ "ಜೀತೆ ಭಿ ಹೈ" ನಾಟಕವನ್ನು ಸಹ ನಿರ್ದೇಶನ ಮಾಡಿದ್ದಾರೆ. ಇದು ದುಬೈನಲ್ಲಿನ ಭಾರತೀಯ ಕಾರ್ಮಿಕರ ಪರಿಸ್ಥಿತಿಯನ್ನು ಅವಲೋಕಿಸುವುದರ ಜೊತೆಗೆ ಅದನ್ನು ಪರಾಮರ್ಶಿಸುತ್ತದೆ. ದರ್ಪಣಾ ತಂಡವು ದುಬೈನಲ್ಲಿನ ಕಾರ್ಮಿಕರಿಗಾಗಿಯೇ ಈ ಪ್ರದರ್ಶನ ನೀಡಿತು. ಇತ್ತೀಚಿಗೆ ಮಲ್ಲಿಕಾ ಸಾರಾಭಾಯಿ ಬರ್ಟೋಲ್ಟ್ ಬ್ರೆಚ್ಟ್ ರ ದಿ ಗುಡ್ ಪರ್ಸನ್ ಆಫ್ ಸಜೆಚವಾನ್ ನಾಟಕದ ಭಾರತೀಯ ರೂಪಾಂತರದಲ್ಲಿ (ಅಹ್ಮದಾಬಾದ್ ಕಿ ಔರತ್ ಭಲಿ-ರಾಮ್ಕಲಿ) ಪಾತ್ರವಹಿಸಿದ್ದಾರೆ. ಅರವಿಂದ್ ಗೌರ್ ನಿರ್ದೇಶನದ ಈ ನಾಟಕವು ೩೪ನೇ ವಿಕ್ರಂ ಸಾರಾಭಾಯ್ ಅಂತರರಾಷ್ಟ್ರೀಯ ಕಲಾ ಉತ್ಸವದಲ್ಲಿ ಪ್ರದರ್ಶನಗೊಂಡಿತು. == ವೈಯಕ್ತಿಕ ಜೀವನ == "ನಾನು ಯಾವಾಗಲೂ ಕೆಲಸಗಳನ್ನು ಮುಚ್ಚಿಡದೆ ನಿರ್ಭಯದಿಂದ ಮಾಡಿದ್ದೇನೆ" ಎಂದು ಮಲ್ಲಿಕಾ ತಮ್ಮ ಕಾಲೇಜು ದಿನಗಳನ್ನು ನೆನೆದು ನುಡಿಯುತ್ತಾರೆ. ಕಾಲೇಜು ದಿನಗಳಲ್ಲಿ ಮಿನಿ-ಸ್ಕರ್ಟ್ ಉಡುಗೆ, ಯುವಕರ ಜೊತೆ ವಿಹಾರ, ಜೊತೆಗೆ ಲಿವ್-ಇನ್ ಸಂಬಂಧವನ್ನೂ ಸಹ ಹೊಂದಿದ್ದರೆಂಬುದನ್ನು ಅವರು ಬಹಿರಂಗಪಡಿಸುತ್ತಾರೆ. ಬೇರೊಬ್ಬನ ಜೊತೆಗೆ ಮೊದಲ ಬಾರಿಗೆ ವಾಸಿಸಲು ಆರಂಭಿಸಿದಾಗ ತಮ್ಮ ತಾಯಿ ಹೌಹಾರಿದ್ದನ್ನು ಅವರು ಸ್ಮರಿಸುತ್ತಾರೆ;"ಈ ಸಂಬಂಧವು ಶಾಶ್ವತವಾದ್ದದ್ದೇ ಅಥವಾ ಅಲ್ಲವೇ ಎಂಬುದನ್ನು ಕಂಡುಕೊಳ್ಳಲು ಇದು ನನಗೆ ಅಗತ್ಯವಾದುದ್ದೆಂದು ನಾನು ಅವರಿಗೆ ವಿವರಿಸಿದೆ."ಎಂದು ಹೇಳುತ್ತಾರೆ. ಮಲ್ಲಿಕಾ ತಮ್ಮ ಕಾಲೇಜು ದಿನಗಳಲ್ಲಿ ಬಿಪಿನ್ ಷಾರನ್ನು ಭೇಟಿಯಾಗುತ್ತಾರೆ, ಹಾಗು ಅಂತಿಮವಾಗಿ ಅವರನ್ನೇ ವರಿಸುತ್ತಾರೆ. ಇವರಿಬ್ಬರೂ ಏಳು ವರ್ಷಗಳ ನಂತರ ವಿಚ್ಛೇದನ ಪಡೆಯುತ್ತಾರೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ, ಪುತ್ರ ರೇವಂತ ಹಾಗು ಪುತ್ರಿ ಅನಾಹಿತ. ಬಿಪಿನ್ ಹಾಗು ಮಲ್ಲಿಕಾ ೧೯೮೪ರಲ್ಲಿ ಮಪಿನ್ ಪಬ್ಲಿಷಿಂಗ್ ನ್ನು ಜಂಟಿಯಾಗಿ ಆರಂಭಿಸಿದ್ದಾರಲ್ಲದೇ ವಿಚ್ಛೇದನದ ನಂತರವೂ, ಒಟ್ಟಾಗಿ ಇದನ್ನು ನಡೆಸುತ್ತಾರೆ. ಕೇವಲ ಮಲ್ಲಿಕಾರ ಮೇಲೆ ಅವಲಂಬಿತ ಪುತ್ರಿ ಅನಾಹಿತ, ಅಮೆರಿಕ ಸಂಯುಕ್ತ ಸಂಸ್ಥಾನದ ಸಾರ ಲಾರೆನ್ಸ್ ಕಾಲೇಜಿನಲ್ಲಿ ಇದೀಗ ವ್ಯಾಸಂಗ ಮಾಡುತ್ತಿದ್ದಾಳೆ (೨೦೧೩ರ ತರಗತಿ). ರೇವಂತ(ಜನನ 1984) ) ಹಾಗು ಅನಾಹಿತ(ಜನನ ೧೯೯೦) ಇಬ್ಬರೂ ಭರವಸೆ ಮೂಡಿಸುವ ಶಾಸ್ತ್ರೀಯ ನೃತ್ಯಗಾರರು. == ರಾಜಕೀಯ ಜೀವನ == ಅಗ ೧೯ ಮಾರ್ಚ್ ೨೦೦೯ರಲ್ಲಿ, ಮಲ್ಲಿಕಾ ಸಾರಾಭಾಯ್, ಗಾಂಧಿನಗರದ ಲೋಕಸಭೆ ಸ್ಥಾನಕ್ಕಾಗಿ ಭಾರತೀಯ ಜನತಾ ಪಕ್ಷದ ಪ್ರಧಾನಿ ಹುದ್ದೆ ಆಕಾಂಕ್ಷಿ ಅಡ್ವಾಣಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು. ಆದರೆ ಓರ್ವ ಕಾಂಗ್ರೆಸ್ ವಕ್ತಾರರು ಈಕೆ ಕಾಂಗ್ರೆಸ್ ನ ಅಭ್ಯರ್ಥಿಯಲ್ಲವೆಂದು ಸ್ಪಷ್ಟಪಡಿಸಿದರು. ಆದಾಗ್ಯೂ ಕಾಂಗ್ರೆಸ್ ವರಿಷ್ಠರು ಗುಜರಾತ್ ಸರ್ಕಾರದ ತನ್ನ ಘಟಕಕ್ಕೆ ಇವರಿಗೆ ಬೆಂಬಲಿಸುವಂತೆ ಕೇಳಿಕೊಂಡಿತ್ತೆಂಬ ವದಂತಿ ಇತ್ತು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಅವರು ೨೦೦೯ರ ಚುನಾವಣೆಗೆ ವೈಯಕ್ತಿಕವಾಗಿ ಕಾಂಗ್ರೆಸ್ ಅಭ್ಯರ್ಥಿಗಾಗಿ ತಾವು ಪಕ್ಷಕ್ಕೆ ಪ್ರಸ್ತಾಪ ಮಾಡಿಲ್ಲವೆಂದು, ಹಾಗು ಪಕ್ಷವೂ ಸಹ ಇದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಅಭ್ಯರ್ಥಿಯಾಗಲು ಪ್ರಸ್ತಾಪಿಸಿಲ್ಲವೆಂದು ಹೇಳಿದರು. ಆದಾಗ್ಯೂ ಇದಕ್ಕೂ ಮುಂಚಿತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹಲವು ಬಾರಿ ಇವರಲ್ಲಿ ಪ್ರಸ್ತಾಪ ಮಾಡಿತ್ತು, ಇವರಲ್ಲಿ ಮೊದಲ ಬಾರಿಗೆ ರಾಜೀವ್ ಗಾಂಧಿ ೧೯೮೪ರಲ್ಲಿ ಪ್ರಸ್ತಾಪಿಸಿದ್ದರು. ಆದರೆ ತಮ್ಮ ಈ ಉಮೇದುವಾರಿಕೆಯನ್ನು ಅವರು ಇಂದಿನ ವೈಷಮ್ಯದ ರಾಜಕೀಯದ ವಿರುದ್ಧ ಸತ್ಯಾಗ್ರಹವೆಂದು ವಿವರಿಸುತ್ತಾರೆ. ಅಂತಿಮವಾಗಿ ಇವರು ಅಡ್ವಾಣಿ ವಿರುದ್ಧವಾಗಿ ಭಾರಿ ಅಂತರದಿಂದ ಸೋಲುತ್ತಾರೆ, ಹಾಗು ಈ ಚುನಾವಣೆಯಲ್ಲಿ ತಮ್ಮ ಠೇವಣಿ ಕಳೆದುಕೊಳ್ಳುತ್ತಾರೆ. == ಪ್ರಶಸ್ತಿಗಳು ಮತ್ತು ಗೌರವಗಳು == ವಿಶ್ವಶಾಂತಿಯ ಪ್ರಚಾರಕ್ಕಾಗಿ ಕಲೆ ಹಾಗು ಸಂಸ್ಕೃತಿಯ ಮೂಲಕ ಕೊಡುಗೆ ನೀಡಿದ್ದನ್ನು ಗುರುತಿಸಿ ೨೦೦೮ರಲ್ಲಿ ವರ್ಲ್ಡ್ ಇಕನಾಮಿಕ್ ಫೋರಮ್ ನಿಂದ ಕ್ರಿಸ್ಟಲ್ ಪ್ರಶಸ್ತಿ. ಥಿಯೇಟರ್ ಪಾಸ್ತಾ ಥಿಯೇಟರ್ ಪ್ರಶಸ್ತಿಗಳು, ೨೦೦೭ ೨೦೦೫ರ ನೋಬಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೆಶನಗೊಂಡ ೧೦೦೦ ಮಹಿಳೆಯರಲ್ಲಿ ಇವರೂ ಒಬ್ಬರು ಇಂಡಿಯನ್ ಫಾರ್ ಕಲೆಕ್ಟಿವ್ ಆಕ್ಷನ್ಸ್ ಆನರ್ ಅವಾರ್ಡ್., ೨೦೦೪ ಕಲಾ ಶಿರೋಮಣಿ ಪುರಸ್ಕಾರ್, ಇನ್ಸ್ಟಿಟ್ಯೂಟ್ ಆಫ್ ಇಕನಾಮಿಕ್ ಸ್ಟಡೀಸ್, ೨೦೦೪ ವರ್ಷದ ಮಹಿಳೆ, ಇಂಡಿಯನ್ ಮರ್ಚೆಂಟ್'ಸ್ ಚೇಂಬರ್(), ೨೦೦೩ ನೈಟ್ಸ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ & ಲೆಟರ್ಸ್, ಫ್ರೆಂಚ್ ಸರ್ಕಾರ ೨೦೦೨ ಸೃಜನಾತ್ಮಕ ನೃತ್ಯಕ್ಕಾಗಿ ಸಂಗೀತ ನಾಟಕ್ ಅಕ್ಯಾಡೆಮಿ ಪ್ರಶಸ್ತಿ, ೨೦೦೦ ಷೆವಲಿಯರ್ ಡೆಸ್ ಪಾಲ್ಮ್ಸ್ ಅಕ್ಯಾಡೆಮಿಕ್ಸ್, ಫ್ರೆಂಚ್ ಸರ್ಕಾರ, ೧೯೯೯ ಶೀಶಾ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಎಂದು ಚಿತ್ರ ವಿಮರ್ಶಕರ ಪ್ರಶಸ್ತಿ, ೧೯೮೪ ಗುಜರಾತ್ ಸರ್ಕಾರ ನಿರ್ಮಿಸಿದ ಗುಜರಾತಿ ಚಿತ್ರ "ಮೇನಾ ಗುರ್ಜಾರಿ" ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ೧೯೭೫ ಮುಟ್ಟಿ ಭರ್ ಚಾವಲ್ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಚಿತ್ರ ವಿಮರ್ಶಕರ ಪ್ರಶಸ್ತಿ ೧೯೭೪ == ಇವನ್ನೂ ನೋಡಿ == ನೃತ್ಯದಲ್ಲಿ ಭಾರತೀಯ ಮಹಿಳೆ ಸಾರಾಭಾಯ್ ಕುಟುಂಬ ವಿಕ್ರಂ ಸಾರಾಭಾಯ್ ಮೃಣಾಲಿನಿ ಸಾರಾಭಾಯ್ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಮಲ್ಲಿಕಾ ಸಾರಾಭಾಯ್ ಅವರ ಗಾಂಧಿನಗರದ ಚುನಾವಣಾ ಪ್ರಚಾರದ ವೆಬ್ಸೈಟ್ ಮಲ್ಲಿಕಾ ಸಾರಾಭಾಯ್ ಅವರ ಖಾಸಗಿ ವೆಬ್ಸೈಟ್ ನಾನು 54 ವರ್ಷದ ಯುವತಿ, ಅಡ್ವಾಣಿ 81 ವರ್ಷದ ವೃದ್ಧರು ದರ್ಪಣಾ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ಪುಟ 2009-04-28 ವೇಬ್ಯಾಕ್ ಮೆಷಿನ್ ನಲ್ಲಿ. ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಮಲ್ಲಿಕಾ ಸಾರಾಭಾಯ್ ಬಗ್ಗೆ ಲೇಖನ == ಹೆಚ್ಚಿನ ಓದಿಗಾಗಿ == ಇಂದ್ರ ಗುಪ್ತರವರ ಇಂಡಿಯಾಸ್‌ ೫೦ ಮೋಸ್ಟ್‌ ಇಲ್ಲಸ್ಟ್ರಿ‌ಯಸ್ ವಿಮೆನ್ ‌( ೮೧-೮೮೦೮೬-೧೯-೩)